Sunday, February 8, 2015

ದೀಪದ ಬುಡ್ಡಿ ಕಳೆದು ಹೋಗಿದೆ.





ನಾಲ್ಕು ಗೋಡೆಯೊಳಗಣದ
ತಮಾವೃತ ಅಂಗಳದೆದೆಯಲ್ಲಿ
ಹಚ್ಚಿಟ್ಟಿದ್ದ ದೀಪದ ಬುಡ್ಡಿ 
ಕಳೆದುಹೋಗಿದೆ.
ಕತ್ತಲೊಳಗೆ ಬದುಕು 
ಸಹ್ಯವಾಗಿಸುವುದೀಗ ಅನಿವಾರ್ಯ.
ಇಲ್ಲವೇ ಕತ್ತಲೊಳಗೇ
ಲೀನವಾಗಿಬಿಡುವ ಭಯ.

ಯಾವ ದಿಕ್ಕಿನ ಸುಳಿಗಾಳಿ
ಬೆಳಕನ್ನು ನುಂಗಿ.,
ತವವನ್ನು ಅಡರಿಹೋಯಿತೋ.?
ಯಾವ ಕತ್ತಲ ಪಹರೆ
ಬೆಳಕಿನೊಂದಿಗೆ ಯುದ್ಧ 
ಹೂಡಿ ಸದ್ದಡಗಿಸಿತೋ.?

ಯಾವ ಮಾಯದ ಶಕುತಿ
ಬೆಳಕಿನಾತ್ಮವ ಇಂಗಿಸಿತೋ.??
ಯಾವ ಯಕ್ಷ ದನಿ
ಬೆಳಗಿಗೆ ಚಾರಣ ಗೀತೆ ಹಾಡಿತೋ.??
ಯಾರು ಏನು ಮಾಡಿದರೋ,
ಯಾರು ಕದ್ದೊಯ್ದರೋ,
ದೀಪದ ಬುಡ್ಡಿ ಕಳೆದುಹೋಗಿದೆ.

ಈ ಕತ್ತಲೋ,
ನೀರವತೆಯ ಬಿಂದುವಿನೆಡೆಗೆ ಸೆಳೆದು.,
ಇದ್ದೂ ಇಲ್ಲದಾಗಿಸಿ
ಇಲ್ಲದೆಯೂ ಇರುವಂತಾಗಿಸಿ.
ಶೂನ್ಯತೆಯ ಒಡಲೊಳಗೆ
ಹೂತುಬಿಡುತ್ತದೆ,
ಮತ್ತೊಮ್ಮೆ ಬೆಳಕು
ಹೊತ್ತಿಸಲಾಗದಂತೆ.!!

-ಡಿ.ವಿ.ಪಿ-
೮/೨/೧೫

Friday, February 6, 2015

ದೇವರೆಲ್ಲಿದ್ದಾನೆ ಹೇಳೆ ಸಖೀ.

ಬೆತ್ತಲು ಜಗದೊಳಗೆ ರಕ್ಕಸರ
ಕೈಗೆ ಸಿಕ್ಕು ಅದೆಷ್ಟೋ ದ್ರೌಪದಿಯರು
ಬೆತ್ತಲಾಗುತ್ತಿದ್ದಾರೆ.
ಹೂಗಳು ಮುರುಟಿ ಹೋಗುತ್ತಿವೆ.
ವಸ್ತ್ರಧಾರಣೆ ಮಾಡಲು ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾನೆ ಹೇಳೆ ಸಖೀ.

ದಿನವೂ ಅರಗಿನರಮನೆಗಳಿಗೆ
ಬೆಂಕಿ ಬೀಳುತ್ತಲೇ ಇದೆ.
ಅಟ್ಟಹಾಸದ ಜಳಪಿಗೆ
ದೇಹಗಳು ಸುಟ್ಟು ಕರಕಲಾಗುತ್ತಿವೆ.
ರಕ್ಷಿಸಲು ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾನೆ ಹೇಳೆ ಸಖೀ.

ಹಡೆದ ಬಳ್ಳಿಗೆ ಸುಮವು ಭಾರವಾದಂತೆ,
ಗಾಳಿಯ ಬಿರುಸಿಗೆ ಸುಮವು ನೆಲಪಾಲು.
ಬೇರಿನಿಂಬಿಲ್ಲದ ಸುಮಕ್ಕೆ
’ಅನಾಥ’ ಹಣೆಪಟ್ಟಿ.
ಹುಟ್ಟಿನ ಗುಟ್ಟು ರಟ್ಟು ಮಾಡಲು
ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾರೆ ಹೇಳಿ ಸಖೀ.

ಸತ್ತು ಬೆತ್ತಲಾದವರಿಗೆಲ್ಲಾ ಜೀವ ಬಂದಿದೆ.
ತೊಗಲುಗಳೇರಿಸಿಕೊಂಡು ಬದುಕಿರುವವರು
ನಿರ್ಲಿಪ್ತತೆಯ ಮಡಿಲಿನಲ್ಲಿ ಅಸುನೀಗುತ್ತಿದ್ದಾರೆ.
ವರ್ತಮಾನ ತಂದ ವರದಿ.,
ದೇವರು ಸ್ಮಶಾನದ ಹಾದಿ ಹಿಡಿದಿದ್ದಾರಂತೆ.
ಬೆಂತರಗಳು ಊರುಗಳ ಹೊಕ್ಕಿವೆಯಂತೆ.
ಸ್ಮಶಾನದ ಹಾದಿ ತೋರೆ ಸಖೀ.

-ಡಿ.ವಿ.ಪಿ-