ನಾಲ್ಕು ಗೋಡೆಯೊಳಗಣದ
ತಮಾವೃತ ಅಂಗಳದೆದೆಯಲ್ಲಿ
ಹಚ್ಚಿಟ್ಟಿದ್ದ ದೀಪದ ಬುಡ್ಡಿ
ಕಳೆದುಹೋಗಿದೆ.
ಕತ್ತಲೊಳಗೆ ಬದುಕು
ಸಹ್ಯವಾಗಿಸುವುದೀಗ ಅನಿವಾರ್ಯ.
ಇಲ್ಲವೇ ಕತ್ತಲೊಳಗೇ
ಲೀನವಾಗಿಬಿಡುವ ಭಯ.
ಯಾವ ದಿಕ್ಕಿನ ಸುಳಿಗಾಳಿ
ಬೆಳಕನ್ನು ನುಂಗಿ.,
ತವವನ್ನು ಅಡರಿಹೋಯಿತೋ.?
ಯಾವ ಕತ್ತಲ ಪಹರೆ
ಬೆಳಕಿನೊಂದಿಗೆ ಯುದ್ಧ
ಹೂಡಿ ಸದ್ದಡಗಿಸಿತೋ.?
ಯಾವ ಮಾಯದ ಶಕುತಿ
ಬೆಳಕಿನಾತ್ಮವ ಇಂಗಿಸಿತೋ.??
ಯಾವ ಯಕ್ಷ ದನಿ
ಬೆಳಗಿಗೆ ಚಾರಣ ಗೀತೆ ಹಾಡಿತೋ.??
ಯಾರು ಏನು ಮಾಡಿದರೋ,
ಯಾರು ಕದ್ದೊಯ್ದರೋ,
ದೀಪದ ಬುಡ್ಡಿ ಕಳೆದುಹೋಗಿದೆ.
ಈ ಕತ್ತಲೋ,
ನೀರವತೆಯ ಬಿಂದುವಿನೆಡೆಗೆ ಸೆಳೆದು.,
ಇದ್ದೂ ಇಲ್ಲದಾಗಿಸಿ
ಇಲ್ಲದೆಯೂ ಇರುವಂತಾಗಿಸಿ.
ಶೂನ್ಯತೆಯ ಒಡಲೊಳಗೆ
ಹೂತುಬಿಡುತ್ತದೆ,
ಮತ್ತೊಮ್ಮೆ ಬೆಳಕು
ಹೊತ್ತಿಸಲಾಗದಂತೆ.!!
-ಡಿ.ವಿ.ಪಿ-
೮/೨/೧೫