Friday, February 6, 2015

ದೇವರೆಲ್ಲಿದ್ದಾನೆ ಹೇಳೆ ಸಖೀ.

ಬೆತ್ತಲು ಜಗದೊಳಗೆ ರಕ್ಕಸರ
ಕೈಗೆ ಸಿಕ್ಕು ಅದೆಷ್ಟೋ ದ್ರೌಪದಿಯರು
ಬೆತ್ತಲಾಗುತ್ತಿದ್ದಾರೆ.
ಹೂಗಳು ಮುರುಟಿ ಹೋಗುತ್ತಿವೆ.
ವಸ್ತ್ರಧಾರಣೆ ಮಾಡಲು ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾನೆ ಹೇಳೆ ಸಖೀ.

ದಿನವೂ ಅರಗಿನರಮನೆಗಳಿಗೆ
ಬೆಂಕಿ ಬೀಳುತ್ತಲೇ ಇದೆ.
ಅಟ್ಟಹಾಸದ ಜಳಪಿಗೆ
ದೇಹಗಳು ಸುಟ್ಟು ಕರಕಲಾಗುತ್ತಿವೆ.
ರಕ್ಷಿಸಲು ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾನೆ ಹೇಳೆ ಸಖೀ.

ಹಡೆದ ಬಳ್ಳಿಗೆ ಸುಮವು ಭಾರವಾದಂತೆ,
ಗಾಳಿಯ ಬಿರುಸಿಗೆ ಸುಮವು ನೆಲಪಾಲು.
ಬೇರಿನಿಂಬಿಲ್ಲದ ಸುಮಕ್ಕೆ
’ಅನಾಥ’ ಹಣೆಪಟ್ಟಿ.
ಹುಟ್ಟಿನ ಗುಟ್ಟು ರಟ್ಟು ಮಾಡಲು
ದೇವರು ಬರಲಿಲ್ಲ.
ನಿನ್ನ ದೇವರು ಎಲ್ಲಿದ್ದಾರೆ ಹೇಳಿ ಸಖೀ.

ಸತ್ತು ಬೆತ್ತಲಾದವರಿಗೆಲ್ಲಾ ಜೀವ ಬಂದಿದೆ.
ತೊಗಲುಗಳೇರಿಸಿಕೊಂಡು ಬದುಕಿರುವವರು
ನಿರ್ಲಿಪ್ತತೆಯ ಮಡಿಲಿನಲ್ಲಿ ಅಸುನೀಗುತ್ತಿದ್ದಾರೆ.
ವರ್ತಮಾನ ತಂದ ವರದಿ.,
ದೇವರು ಸ್ಮಶಾನದ ಹಾದಿ ಹಿಡಿದಿದ್ದಾರಂತೆ.
ಬೆಂತರಗಳು ಊರುಗಳ ಹೊಕ್ಕಿವೆಯಂತೆ.
ಸ್ಮಶಾನದ ಹಾದಿ ತೋರೆ ಸಖೀ.

-ಡಿ.ವಿ.ಪಿ-

No comments:

Post a Comment